ನಿಮ್ಮ ಪ್ರೋತ್ಸಾಹ ನಮ್ಮ ಏಳಿಗೆಗೂ ಇರಲಿ


ಮಾನ್ಯರೆ,

ಈ ನಿಟ್ಟಿನಲ್ಲಿಯೇ,
ಬಾವಗುಚ್ಚ ಎಂಬ audio cd ಯನ್ನು ಕುರುಡರಾದ ನಾವುಗಳು ಹೊರತಂದಿದ್ದೇವೆ.
     ಹೇಮಂತ್ ಕುಮಾರ್ ಬಿ.ಆರ್ ರವರು ಸಂಗೀತ ನೀಡಿರುವ, ಟೋಟಲ್ ಕನ್ನಡದ ಸಹಕಾರದೊಂದಿಗೆ, ಸ್ವತಃ ಕುರುಡರಾದ ನಾವುಗಳು ಪ್ರಸ್ತುತಪಡಿಸುತ್ತಿರುವ 12 ಹಾಡುಗಳಿರುವ "ಬಾವಗುಚ್ಚ" ಹೆಸರಿನ ಆಡಿಯೋ ಸಿ.ಡಿ ಕೊಳ್ಳಲು ಬೇಟಿ ನೀಡಿ
online: http://totalkannada.com/bhaava-guchcha--26138
ofline: swapna book house ಹಾಗೂ ಟೋಟಲ್ ಕನ್ನಡ ಮಳಿಗೆ.
phone by calling  080 - 4146 0325 , 92434 55672 or by sending an
email to support@totalkannada.com
ಬೆಲೆ: 96
ಹಾಡು, tracks ಹಾಗೂ ಸಾಹಿತ್ಯ  ಈ ಮೂರು ಒಟ್ಟಿಗೆ ಈ ಸಿ.ಡಿ ಯಲ್ಲಿವೆ.
ಕನ್ನಡದ ಸಾಹಿತ್ಯ ಹಾಗೂ ಸಂಗೀತ ಇತಿಹಾಸದಲ್ಲೇ ಮೊದಲಬಾರಿಗೆ ಕುರುಡರು ಗುಂಪಾಗಿ ಮಾಡಿದ ಮೊದಲನೆ ಪ್ರಯತ್ನ.
"ನಿಮ್ಮ ಪ್ರೋತ್ಸಾಹ ನಮ್ಮ ಏಳಿಗೆಗೂ ಇರಲಿ."
ಹೆಚ್ಚಿನ ವಿವರಗಳಿಗೆ mobile: 9035911023
ಬಾವಗುಚ್ಚ (bhaavagucca) face group id: 938354062863592@groups.facebook.com

ಬಾವಗುಚ್ಚದಲ್ಲಿರುವ
ಎಲ್ಲಾ 12 ಹಾಡುಗಳ
ಬರಹ ರೂಪ

ಪರಿವಿಡಿ

ಹೆಸರು ಹಾಡು mobile e-mail
ಶ್ರೀನಿವಾಸಮೂರ್ತಿ
  • ಕೋಪ ಹಿಂಸೆ ಕೇಡ ಬಿಟ್ಟು
  • ಕೇಳೀರ್ ಕೇಳ್ರಣ್ಣ ಕೇಳ್ರವ್ವೋ
  • 9035911023 ms.srini@rediffmail.com
    ಮಾರುತಿ ಮೊಗೇರ
  • ಇಂದು ಇವರ ಜನುಮದಿನ
  • 9901059595
    ಸುದರ್ಶನ್
  • ಇಡು ನಂಬಿಕೆ ದೇವನಲಿ
  • 7760849183
    ಕೇಶವಮೂರ್ತಿ
  • ಅಮ್ಮ ನಾನು ನಿನ್ನವನಾದರೆ
  • ಕೆಲ್ಸ್ದಿಂದ ಬರ್ತಿದ್ದೆ ನನ್ ಹೆಂಡ್ರು ನಿಂತಿದ್ಳು ತುಟಿ ತುಂಬ ಹುಸಿನಗೆಯ ಬೀರಿ
  • 8548951999 keshavakalanandana@gmail.com
    ಹರ್ಷ ಟಿ.ಜಿ
  • ಭಾವನೆಗಳ ಅಲೆಯಲ್ಲಿ ತೇಲಬೇಡ ಗೆಳತಿ
  • ಗೆಳತಿ ಗಾಳಕ್ಕೆ ಸಿಕ್ಕಿರುವ ಮೀನು
  • 9343709884 harsha.t.g.sky@gmail.com
    ವಿನೋದ್ ಪ್ರಕಾಶ್
  • ಹರಸಮ್ಮ ಭಾರತೀಯೆ ಸೌಭಾಗ್ಯ ಮೂರುತಿಯೆ
  • 9986699710 vinu.hindh@gmail.com
    ಯೋಗೇಶ್
  • ಜೀವನ ಎಂಬೀ
  • 9686619669 yoyogeesh@gmail.com
    ನೇತ್ರಾವತಿ
  • ನನ್ನ ಹೃದಯ ಕೋಣೆಯಲ್ಲಿ ಕಟ್ಟಿ ಪ್ರೇಮ ಮಂದಿರ
  • 8147536008 nethravathienr@gmail.com
    ಅಶೋಕ ಕೆ
  • ಮನ ಮರುಗಿದರೆ ನೋವಲ್ಲೇ
  • 09968549963 k.ashoka23@gmail.com



    ಕೋಪ ಹಿಂಸೆ ಕೇಡ ಬಿಟ್ಟು

    --ಶ್ರೀನಿವಾಸಮೂರ್ತಿ


    |ಪ| ಕೋಪ ಹಿಂಸೆ ಕೇಡ ಬಿಟ್ಟು
    ಒಲವ ಕಡೆಗೆ ಗಮನ ಕೊಟ್ಟು
    ಮಧುರ ಬಾಳ ಕಡೆಗೆ ನಡೆದು
    ನಿನ್ನ ಬಳಿಗೆ ಮರಳಿ ಬರುವೆ

    |1| ತಪದ ಬದಲು ಕೆಲಸ ದೇವ
    ಹರಸು ನಿನ್ನ ಮನೆಗೆ ಬರಲು
    ನಾನೆ ಹೂವು ಹಣ್ಣು ಕಾಯಿ
    ಧೂಪ ದೀಪ ನಿನಗೆ ದೇವ

    |2| ಬೆಂಕಿ ಬದುಕ ನೀಡ ಬೇಡ
    ಕೊಂಕು ನಡತೆ ಬಿಡುವೆ ದೇವ
    ಬೆಳಕು ಗಾಳಿ ನೀರು ಊಟ
    ನೀಡಿ ಮುಕುತಿ ನೀಡು ದೇವ

    |3| ಮನಸ ಊರ ಬೆಳಗು ನೀನು
    ಮೋಸ ಕೆಂಡ ಎರಚಲಾರೆ
    ಬೆಳಕ ಹಂಚಿ ಸುಖದಿ ಇರಲು
    ಅರಿವ ಹೊಳೆಯ ತೋರು ದೇವ


  • ಪರಿವಿಡಿ

    ಇಂದು ಇವರ ಜನುಮದಿನ

    --ಮಾರುತಿ ಮೊಗೇರ


    |ಪ| ಇಂದು ಇವರ ಜನುಮದಿನ
    ವರ್ಷಕ್ಕೊಮ್ಮೆ ಬರುವ ದಿನ
    ಹರುಷ ಸುಖವ ತರುವ ದಿನ
    ಮರೆಯಲಾಗದಂತ ದಿನ

    |1| ಸ್ನಾನ ಪಾನ ಗೈವ ದಿನ
    ಹೊಸ ಬಟ್ಟೆಯ ಉಡುವ ದಿನ
    ಭಗವಂತನ ಭಜಿಸೋ ಕ್ಷಣ
    ಧನ್ಯವಾಯಿತು ಇಂದು ಮನ

    |2| ದೈವ ಕೃಪೆಯ ಪಡೆವ ದಿನ
    ಆಶೀರ್ವಾದವ ಪಡೆವ ದಿನ
    ಶುಬಾಶಯಗಳು ಸಿಗುವ ದಿನ
    ಸಂಭ್ರಮ ಭರಿತ ಜನುಮದಿನ

    |3| ಮನಕೆ ಶಾಂತಿ ತರುವ ದಿನ
    ನಕ್ಕು ನಲಿದು ಕುಣಿವ ದಿನ
    ಜನಿಸಿದ ದಿನವ ಸ್ಮರಿಸೊ ದಿನ
    ಬಂಧು ಮಿತ್ರರೊಳು ಬೆರೆವ ದಿನ

    |4| ವಿವಿಧ ಸಿಹಿಯ ಸವಿವ ದಿನ
    ಸವಿ ನುಡಿಯನು ಆಡುವ ದಿನ.
    ಸಂತೋಷದಲಿ ತೇಲುವ ದಿನ
    ಮನವು ಪುನಿತವಾದ ದಿನ

    |5| ಕಷ್ಟ ನೋವು ಮರೆವ ದಿನ
    ಹರುಷ ಸುಖದಿ ಮೆರೆವ ದಿನ
    ಬದುಕಿನಲ್ಲಿ ಬರುವ ದಿನ
    ಬಂಗಾರದಂತ ಜನುಮದಿನ


  • ಪರಿವಿಡಿ

    ಇಡು ನಂಬಿಕೆ ದೇವನಲಿ

    --ಸುದರ್ಶನ್


    |ಪ| ಇಡು ನಂಬಿಕೆ ದೇವನಲಿ
    ಬಿಡು ಅಂಜಿಕೆ ಬಾಳಿನಲಿ
    ದುರ್ಗುಣಗಳ ಅಳಿಸುತಲಿ
    ನಡೆ ಮನುಜ ನಡೆ ಮನುಜ ಸತ್ಯದ ಪಥದಲಿ.

    |1| ಪರರ ಸಂಪತ್ತನು ದೋಚುವುದೇಕೆ?
    ಬರುವ ಆಪತ್ತಿಗೆ ಸಿಲುಕುವುದೇಕೆ?
    ಸಿಲುಕಿ ನೀ ನರಳುತ ಬಳಲುವುದೇಕೆ?
    ಕೀಳಾಗಿ ಮೃತ್ಯುವಿನ ಪಾಲಾಗುವುದೇಕೆ?

    |2| ದುಶ್ಚಟಗಳ ದೊರೆಯಾಗಿ ಮೆರೆಯುವುದೇಕೆ?
    ದುರ್ಬಲರಿಗೆ ನೆರವಾಗದೆ ಬಾಳುವುದೇಕೆ?
    ಮನೆಗೆ ಹೆಮ್ಮಾರಿಯಾಗಿ ಬದುಕುವುದೇಕೆ?
    ಅರ್ಥವಿರದ ವ್ಯರ್ಥ ಬದುಕ ಸಾಗಿಸೋದೇಕೆ?

    |3| ಕಂಬನಿಯ ತರದಿರು ಪರರ ಕಣ್ಣಲ್ಲಿ
    ನಿನ್ನನ್ನು ನಂಬಿಹರ ಮರೆಯದಿರು ಬಾಳಲ್ಲಿ
    ಎಳೆಯ ಮನಗಳನು ನೋಯಿಸದಿರು ಕಹಿ ನುಡಿಗಳಲಿ
    ಹೃದಯಗಳ ಯಜಮಾನನಾಗು ಸನ್ನಡತೆಯಲಿ

    |4| ಹಂಚಿ ಉಂಡರೆ ಹಸಿವಿಲ್ಲ ಎಂಬ ಸತ್ಯವ
    ಪಾಲಿಸಯ್ಯ ಜೀವನದಿ ನಿತ್ಯ ಮಾನವ
    ಒಂದಾದರೂ ನೆನಪಲ್ಲಿ ಉಳಿವ ಕಾರ್ಯವ
    ಸಾಧಿಸಯ್ಯ ಸೇರೊ ಮೊದಲು ಜವನ ಲೋಕವ.


  • ಪರಿವಿಡಿ

    ಅಮ್ಮ ನಾನು ನಿನ್ನವನಾದರೆ

    --ಕೇಶವಮೂರ್ತಿ


    |ಪ| ಅಮ್ಮ ನಾನು ನಿನ್ನವನಾದರೆ
    ಚಂದಿರ ಮಾಮ ನನ್ನವನು
    ಎಲ್ಲೇ ಹೋಗಲಿ ಜೊತೆಗೆ ಬರುವನು
    ಅಮ್ಮನ ಹಾಗೆ ನಗುತ ನಡೆವನು

    |೧| ನಿನ್ನ ಬೆರಳು ಹಿಡಿದು ನಾನು ಎಲ್ಲೆಡೆ ಜೊತೆಯಲಿ ಬರುವ ಹಾಗೆ
    ಎಷ್ಟೇ ದೂರ ನಡೆದರು ನಾನು, ಬೆಳಕನು ಚೆಲ್ಲುತ ಬರುವನು ತಾನು

    |೨| ಪಕ್ಕದ ಮನೆಯ ಚೇತು ಪಾಪು
    ನನ್ನನು ಕೂಡಿ ಆಡಲು ಬಂದರೆ
    ಮನೆ ಅಂಗಳ ಕಟ್ಟೆಯ ಮೇಲೆ
     ಕೊಂಬೆಯ ನಡುವಲಿ ಎಲೆಗಳ ಮರೆಯಲಿ
    ನನ್ನನೇ ಚುಕ್ಕಿಯ ಆಟಕೆ ಕರೆಯುವನು

    |೩| ಮರುದಿನ ಅಜ್ಜನ ಊರಿಗೆ ಹೋದರೆ ಹೇಗೋ ತಿಳಿದು ಅಲ್ಲಿಗೂ ಬಂದನು
    ನಡುಮನೆ ಒಳಗಿನ ತೆರೆದ ಸೂರಲಿ
    ನಗುವನು ಚೆಲ್ಲುತ ಬೆಳಕನು ಬೀರುತ
    ಆಟವ ಆಡಲು, ಊಟವ ಮಾಡಲು
    ಪುಟ್ಟ ಬಯಲಿಗೆ ಬಾರೊ ಎಂದನು

    |೪| ಎಲ್ಲೇ ಹೋದರು ಅಮ್ಮನ ಹಾಗೆ
    ಪ್ರೀತಿಯ ತೋರುತ ಜೊತೆಯಲಿ ಬರುವನು
    ಅಮ್ಮ ಚಂದಿರ ಇಬ್ಬರೆ ಸಾಕು
    ಬೇರೆ ಗೆಳೆಯರು ಏತಕೆ ಬೇಕು
    ಊಟಕೆ ಅಮ್ಮನ ಪ್ರೀತಿಯೆ ಸಾಕು, ಆಟಕೆ ಚಂದ್ರನ ಜೊತೆಯದು ಬೇಕು


  • ಪರಿವಿಡಿ

    ಮನ ಮರುಗಿದರೆ ನೋವಲ್ಲೇ

    --ಅಶೋಕ ಕೆ


    |ಪ| ಮನ ಮರುಗಿದರೆ ನೋವಲ್ಲೇ
    ಕಂಬನಿ ಕೊಯ್ಲಲಿ ಪದಗಳ ಬೆಸೆವೆ
    ಪುಳಕಿತನಾದರೆ ಖುಷಿಯಲ್ಲೇ
    ನಾಲಿಗೆ ಚಾಚುವೆ ಕನ್ನಡದಲ್ಲೇ
    ಹಾಡಲೆಂದೇನೂ ಅಲ್ಲ, ಇದು ನನ್ನದೇ ಹಾಡೆಲ್ಲಾ

    |1| ಭಾವದ ತೊಟ್ಟಿಲು ಕವಿಯ ಮಡಿಲಲಿರಬೇಕು
    ಬೆಚ್ಚನೆ ಭಾಷೆಯ ಹೊದಿಕೇ ಬೆನ್ನಿಗಿರಬೇಕು
    ಕವನದಾ ಕನಸುಗೂಸು ಕಣ್ತೆರೆದಿಹ ಇರುಳು
    ಕನ್ನಡ ಕನಲಿಕೆ ನೆನಪಿನಾ ಹಗಲು
    ಹೇಳಲೆಂದೆ ಕಟ್ಟಿದೆ ಕನ್ನಡದೀ ಹಾಡು
    ಮರೆತೂ ನಾ ಮರೆಯೆನು ನನ್ನೀ ನಾಡು

    |2| ದೂರದಲಿದ್ದರು ಬೆನ್ನ ಗುಂಗಾಗಿ,
    ಒಡಲಲೆ ಹುದುಗಿದೆ ಸ್ವರದ ಸೆಲೆಯಾಗಿ
    ನೆನಪಾದರೆ ಸೈ ಹುಟ್ಟಿತೋ ಕನ್ನಡಿಗ!.......
    ಹೃದಯದ ಉಳುಮೆಗೆ ಹೊರಟಿದೆ ಹೊಸನೊಗ,
    ಸಾಗಿದೆ ತಾನಾಗಿ ಸವಿಯ ಹಾಡಾಗಿ;
    ಕೇಳಿ ಗುನುಗಿಸು ತುಸುತುಟಿಯ ನೀ ಬಿರಿದು
    ಕವಿ ಮಂಜರಿಯಲ್ಲವೇ ನಮ್ಮ ಕನ್ನಡವಿದು


  • ಪರಿವಿಡಿ

    ಹರಸಮ್ಮ ಭಾರತೀಯೆ ಸೌಭಾಗ್ಯ ಮೂರುತಿಯೆ

    -ವಿನೋದ್ ಪ್ರಕಾಶ್


    |ಪ| ಹರಸಮ್ಮ ಭಾರತೀಯೆ ಸೌಭಾಗ್ಯ ಮೂರುತಿಯೆ
    ಕರುಣೆ ಪ್ರೇಮದಿ ಸಲಹೋ ಶಕ್ತಿ ರೂಪಿಣಿ ತಾಯೆ

    |1| ಬತ್ತದಿರಲಿ ನಮ್ಮೆದೆಯ ಒಲವಿನ ಒರತೆ
    ಉಕ್ಕಿ ಹರಿಯಲಿ ಸದಾ ಶುದ್ಧ ಭಾವದ ಸರಿತೆ

    |2| ಮಿಡಿಯಲಿ ಈ ಹೃದಯ ಪರರ ನೋವನು ಕಂಡು
    ಆವರಿಸದಿರಲೆಮ್ಮ ಸ್ವಾರ್ಥ ಮೋಹದ ಹಿಂಡು

    |3| ಚಾಚಲಿ ಈ ಕರವು ಬಿದ್ದ ಬಂಧುಗಳೆಡೆಗೆ
    ಎರಗಲಿ ಈ ಶಿರವು ನಿನ್ನ ಪಾದದಡಿಗೆ

    |4| ಬಾಡದೆ ನಗುತಿರಲಿ ನಲುಮೆ ನಂದನವನವು
    ನಲಿವಲಿ ಸೌರಭ ಸೂಸಿ ಭಾವೈಕ್ಯ ಸುಮವು

    |5| ಮಲಿನವಾಗದಿರಲಿ ಮನದ ಅಂತರಗಂಗೆ
    ಶರಧಿಯ ಸೇರೋ ಕಾವ್ಯಗಂಗೆ

    |6| ಬೆಳಗಿರಲಿ ಎಮ್ಮಾತ್ಮದಾನಂದ ಜ್ಯೋತಿ
    ಬೀರಲಿ ಬೆಳಕನ್ನು ತರಲಿ ನೆಮ್ಮದಿ ಶಾಂತಿ


  • ಪರಿವಿಡಿ

    ಜೀವನ ಎಂಬೀ

    --ಯೋಗೇಶ್


    |ಪ| ಜೀವನ ಎಂಬೀ
    ಮೂರಕ್ಷರದಿ ಜೀವಿತ ಕಳೆಯಿತಲ್ಲ,
    ಜೀವಿತ ಕಳೆಯಿತಲ್ಲ

    |1| ಬಾಳಿನ ನೌಕೆಯು ಬಾರದಿ ಮುಳುಗಿದೆ
    ಪ್ರೀತಿಯ ತೇಲಿಸದೆ
    ಸವತಿಯ ಮೋಹದ ಬಲೆಯಲಿ ಬಲಿತು
    ಮಮತೆಯ ಮರೆತನಲ್ಲ

    |2| ನಡೆಯುವ ಮಗುವಿಗೆ ನುಡಿಯನು ಹೇಳದೆ
    ಬದುಕಿನ ಭಾವದ ಮರ್ಮವನರಿಯದೆ
    ಸರಸರ ನಡೆಹೋದ
    ಅವನು ಸರಸರ ನಡೆಹೋದ

    |3| ವಿಧಿಯನು ಹಳಿಯುತ
    ಹಣೆಬರ ಎನ್ನುತ
    ಹತ್ತಿದೆ ನೌಕೆಯನು
    ನಾನ್ ಬೆನ್ಹತ್ತಿದೆ ಬದುಕನ್ನು

    |4|ಗಾಳಿಯು ಬೀಸದೆ ಎಲೆಗಳು ಉದುರಿತು
    ಭೂಮಿಯ ಕಂಪನದಿ
    ಪ್ರೀತಿಯು ಹಾಗೆ ನನ್ನಲಿ ಮುದುಡಿತು
    ಬಯಕೆಯ ಹಂಬಲದಿ


  • ಪರಿವಿಡಿ

    ನನ್ನ ಹೃದಯ ಕೋಣೆಯಲ್ಲಿ ಕಟ್ಟಿ ಪ್ರೇಮ ಮಂದಿರ

    --ನೇತ್ರಾವತಿ


    |ಪ| ನನ್ನ ಹೃದಯ ಕೋಣೆಯಲ್ಲಿ ಕಟ್ಟಿ ಪ್ರೇಮ ಮಂದಿರ
    ಇರುವ ನಲ್ಲ ಸಾಟಿ ಅವಗೆ ಹುಣ್ಣಿಮೆಯ ಚಂದಿರ
    ಮಾತು ಬಾಣ ಹೃದಯವು ಆಭರಣ
    ನನ್ನವನು ಕೃಷ್ಣ ಸುಂದರ.

    |1| ಮುಸ್ಸಂಜೆ ಹೊತ್ತಲ್ಲಿ ನಾ ಕಾದು ಕುಳಿತಾಗ
    ಬರಲಾರೆ ಎಂದನಾತ
    ಒಡನೆ ಬಂತೆನಗೆ ಕೋಪ
    ಅದು ಮೀರಿಹುದು ಅಗ್ನಿ ತಾಪ.
    ಮುಗುಳ್ ನಗೆಯ ಬೀರಿ ಪಿಸು ಮಾತಲ್ಲಿ ಪ್ರೇಯಸೀ ಎಂದಾಗ
    ಮುನಿಸು ಕರಗಿ ನನ್ನ ಒಲುಮೆಯ ತೋರಣವು ತೂಗಾಡಿತು ಅವನಲ್ಲಿ.

    |2| ಸುಖ ದುಃಖ ತುಂಬಿದ ಸಹಬಾಳ್ವೆ ನಮ್ಮದು
    ಕಲ್ಮಷವೂ ಕಾಣದ ನೊರೆಹಾಲ ಪ್ರೀತಿ ಇಹುದು
    ನಮ್ಮೊಲವು ಸ್ವರ್ಗಕ್ಕೂ ಹಿರಿದು
    ಕಾದಾಟ ನಿಮಿಷ, ಒಡನಾಟ ಹರುಷ ಉಳಿದಿಲ್ಲ ಇನ್ನು ವಿರಸ
    ಮನದಲ್ಲಿ ಮಧುವ ಸವಿದು
    ಆನಂದದ ಚಿಲುಮೆಯಲಿ ಬಾಳುತಿರುವೆವು.


  • ಪರಿವಿಡಿ

    ಭಾವನೆಗಳ ಅಲೆಯಲ್ಲಿ ತೇಲಬೇಡ ಗೆಳತಿ

    --ಹರ್ಷ ಟಿ.ಜಿ


    |ಪ| ಭಾವನೆಗಳ ಅಲೆಯಲ್ಲಿ ತೇಲಬೇಡ ಗೆಳತಿ,
    ತುಂಬಾನೇ ಅಪಾಯ ಸರಿಯಿಲ್ಲ ಈ ಪ್ರೀತಿ.

    |೧| ದೂರದಿಂದ ಕಾಣೋ ಬೆಟ್ಟ ನೋಡೋಕೆ ಸುಂದರ,
    ಹತ್ತುವಾಗಲೇ ತಿಳಿಯೋದು ಕಷ್ಟ
    ಕಲ್ಲು ಮುಳ್ಳು ಅಪಾರ.
    ನೋಡಿ ಖುಷಿ ಪಡಬೇಕು ಹುಣ್ಣಿಮೆ ಚೆಂದಿರನ,
    ಮುಟ್ಟುವಂತ ಆಸೆಬೇಡ ಮೂಡಿಸುತ್ತೆ ಬೇಸರನ.
    ಶಾಂತವಾಗಿರುವಾಗ ಸಾಗರ,
    ನೋಡೋಕೆ ತುಂಬಾನೇ ಸುಂದರ.
    ಕ್ಷಣದಲ್ಲೇ ಏರಬಹುದು ಅಲೆಗಳ ಉಬ್ಬರ,
    ಹೊತ್ತೊಯ್ಯಬಹುದು ಹಿಂತಿರುಗಿ ಬರದಷ್ಟು ದೂರ.

    |೨| ಹೃದಯದ ಮರದಲ್ಲಿ ಉಂಟು
    ಪ್ರೀತಿ ಹಕ್ಕಿಗೆ ಗೂಡು,
    ಹಾರಿಹೋದ ಹಕ್ಕಿ ಬಾರದಿದ್ದಾಗ
    ಹಾಡಬೇಕಷ್ಟೆ ವಿರಹದ ಹಾಡು.
    ಕಣ್ಣು ನೋಡಿ ಆಸೆಪಟ್ರು
    ಮಿಡಿಯೋದು ಹೃದಯಾನೆ,
    ಹೃದಯಕ್ಕೆ ಎಷ್ಟೆ ನೋವಾದ್ರೂನು
    ಸುರಿಯೋದು ಕಣ್ಣೀರೇನೆ.
    ಕಾಣುವಾಗ ಮಾತ್ರಾನೇ ತುಂಬ ಸೊಗಸು,
    ಆಗಾಗ ಬೀಳುವಂತ ಸವಿಗನಸು.
    ಸರಿಯಿಲ್ಲ ಹಾಳಾದ ಈ ವಯಸ್ಸು,
    ತಪ್ಪು ಮಾಡೋ ಮುಂಚೆ ಮನಸೆ ಎಚ್ಚರಿಸು.

    |೩| ಯೌವನದ ವಯಸು
    ಕಾಣೋದೆಲ್ಲ ಸೊಗಸು,
    ಚೂರಾದ್ರೆ ಕನಸು
    ಅಳಬೇಕು ಸುಮ್ಮನೆ ಮನಸು.
    ಒಳ್ಳೆ ಮಾತು ಕೇಳಲ್ಲ
    ಸರಿ ತಪ್ಪು ತಿಳಿಯಲ್ಲ,
    ಮಿಂಚಿ ಹೋದರೆ ಕಾಲ
    ಉತ್ತರಾನೆ ಸಿಗೋದಿಲ್ಲ.
    ಅಪ್ಪ ಅಮ್ಮ ಬಂಧು ಬಳಗ
    ನೆನಪಾಗದು ಪ್ರೀತಿಸುವಾಗ,
    ಅಪ್ಪಿ ತಪ್ಪಿ ಮೋಸಹೋದಾಗ
    ಕಣ್ಣು ಒರೆಸೋರು ಯಾರು ಆವಾಗ.
    ಇರುವುದೊಂದೇ ಜೀವನ ಯೋಚಿಸು ಪ್ರೀತಿಸುವಾಗ


  • ಪರಿವಿಡಿ

    ಗೆಳತಿ ಗಾಳಕ್ಕೆ ಸಿಕ್ಕಿರುವ ಮೀನು

    --ಹರ್ಷ ಟಿ.ಜಿ


    |ಪ| ಗೆಳತಿ ಗಾಳಕ್ಕೆ ಸಿಕ್ಕಿರುವ ಮೀನು
    ಆಗಿರುವೆ ನಿನ್ನ ಪ್ರೀತಿಗೆ ಸಿಕ್ಕಿ ನಾನು

    |1| ಏನೂ ತಿಳಿಯದ ಮುಗ್ಧ ಅಂದುಕೊಂಡಿದ್ದೆ ನನ್ನ
    ಏನು ಮೋಡಿ ಮಾಡಿದೆ ಪ್ರೀತಿಸಿಬಿಟ್ಟೆ ನಿನ್ನ.
    ನನ್ನ ಪಾಡಿಗೆ ಇದ್ದೆ ಹೆಂಗೋ ಹಾಯಾಗಿ
    ಹೇಗೆ ಬಂದು ಗಂಟುಬಿದ್ದೆ ಹೇಳು ನೀ ಜೊತೆಯಾಗಿ
    ಕನಸಲು ಕಾಡಿರಲಿಲ್ಲ ಯಾವ ಹುಡುಗಿಯು ನನ್ನ
    ಕಣ್ಣ ನೋಟದಲ್ಲೆ ಸೆಳೆದೆ ಹೇಗೆ ಹೇಳು ಚಿನ್ನ.

    |2| ಸೂರ್ಯನ ಸುತ್ತೋದು ಭೂಮಿಯ ನಿಯಮ
    ನಿನ್ನ ಹಿಂದೆ ಸುತ್ತುತ್ತಿರುವೆ ಇದುವೆನಾ ಪ್ರೇಮ?
    ಹುಣ್ಣಿಮೆಯಂದೆ ಉಕ್ಕುವಂತೆ ಕಡಲು
    ಉಕ್ಕುತಿದೆ, ತುಡಿಯುತಿದೆ ಮನವು ನಿನ್ನ ಸೇರಲು.
    ಏನೋ ಅನನ್ಯ ಸೆಳೆತ ನಿನ್ನಲೀ
    ವಶವಾಗಿ ಹೋಗಿರುವೆ ಏನುಮಾಡಲಿ?

    |3| ಬಿದ್ದಿರುವೆ ನಾ ನಿನ್ನ ಪ್ರೀತಿಯ ಬಲೆಯಲ್ಲಿ
    ಶರಣಾದೆ ಈ ಮೋಡಿಗೆ ನಾ ಎಲ್ಲಿ ಹೋಗಲಿ
    ಎಷ್ಟೇ ಜನುಮ ಇದ್ದರೂನು ಪ್ರೀತಿ ಮಾತ್ರ ನಿನ್ನಲಿ
    ಬದಲಾಗದೆ, ಮರೆಯಾಗದೆ ನಿನ್ನ ಬೊಂಬೆ ಕಣ್ಣಲಿ
    ನಿನ್ನ ದಾಸ ಆದೆ ನಾನು ಪ್ರೀತಿಯ ವರ ನೀಡು
    ನೀ ಸಿಗದೆ ಹೋದರೆನಗೆ ಹುಚ್ಚನ ಪಾಡು


  • ಪರಿವಿಡಿ

    ಕೆಲ್ಸ್ದಿಂದ ಬರ್ತಿದ್ದೆ ನನ್ ಹೆಂಡ್ರು ನಿಂತಿದ್ಳು ತುಟಿ ತುಂಬ ಹುಸಿನಗೆಯ ಬೀರಿ

    --ಕೇಶವಮೂರ್ತಿ


    |ಪ| ಕೆಲ್ಸ್ದಿಂದ ಬರ್ತಿದ್ದೆ ನನ್ ಹೆಂಡ್ರು ನಿಂತಿದ್ಳು ತುಟಿ ತುಂಬ ಹುಸಿನಗೆಯ ಬೀರಿ
    ಹೆಂಗಸ್ರು ನಗ್ತಿದ್ರೆ ಏನಾದ್ರು ಇರ್ತೈತೆ ಮನ್ಸ್ನಾಗೆ ಹೊಸ್ದೊಂದು ಪೀಠ್ಕೆ

    |೧| ಏನ್ ಚಿನ್ನ ಏನಾರೂ ಇಸೆಸ ಐತೇನು ಹಿಂಗ್ಯಾಕೆ ನಗ್ತಿದ್ಯ ನೀನು
    ಅಂಗಂತ ಕೇಳೋಕು ಮುಂಚೇನೆ ಅವಳ್ ಕೈ ಮೆತ್ಮೆತ್ಗೆ ನನ್ ತಲೆ ಸವರ್ತಿತ್ತು
    ನೆವರ್ಸ್ತಾ ನೆವರ್ಸ್ತಾ ಹುಳಿ ಹೆಂಡ ಕುಡ್ದಂಗೆ ಮತ್ ಏರಿ ನಿದ್ಬಂತು ನನ್ಗೆ

    |೨| ಪಟಾಕಿ ಹೊಡ್ದಂಗೆ ಸದ್ ಕೇಳಿ ಎದ್ದಾಗ ಕುಡ್ದಿದ್ದು ಇಳ್ದೊಯ್ತು ಒಮ್ಗೆ
    ಬೀಡಿನ ಸೇದಾಕೆ ಜೇಬ್ನಾಗೆ ಕೈ ಇಕ್ದೆ ಕಣ್ನೆಲ್ಲಾ ಕತ್ಲಾದಂಗಾಯ್ತು
    ಸೋಡಾನು ನೀರುನು ಇಲ್ದೀರೊ ಬ್ರಾಂದಿನ ವಣ್ಗಂಟ್ಲುಗ್ ಬುಟ್ಕಂಡಂಗ್ ಆಯ್ತು
    ವಾರ್ವೆಲ್ಲ ಗೆಯ್ದಿದ್ದ ಸಂಬ್ಳಾನ ಎತ್ತಿದ್ಳು ತಲೆ ಸವ್ರೋ ಉಪಾಯ ಹೂಡಿ

    |೩| ಕುಡುಕ್ರಂದ್ರೆ ಎಡ್ರಂತ ತಿಳಿಬ್ಯಾಡ ಕಮ್ಮಿ
    ಎನಾರು ಉಪಾಯ ಹುಡುಕ್ತೀನಿ
    ಮನ್ಸ್ನಾಗೆ ಅಂದ್ಕಂಡು, ಯೋಚ್ನೆಯ ಮಾಡ್ಕಂಡು ಅಳ್ಳಿಮರ್ದ್ ಬುಡ್ದಾಗೆ ಕುಂತ್ಕಂಡೆ
    ತಲೆಯಲ್ಲಾ ಕೆಟ್ಹೋಯ್ತು, ಕುಡಿಯಾಕೆ ದುಡ್ಬೇಕು
    ಏನ್ಮಾಡ್ಲಿ ನೀಹೇಳು ಕೋಡೇಸ
    ತಟ್ಟಂತ ಮಿಂಚಂಗೆ ಉಪಾಯ ಹೊಳಿತಾಗ
    ಕೂದ್ಲಿಲ್ದ ನನ್ ತಲೆಯಾ ಒಳ್ಗೆ

    |೪| ಸದ್ದಿಲ್ದೆ ಮನೆಗ್ ಬಂದು ಪಟ್ಟಾಗಿ ಉಣ್ಕಂಡು
    ಹೆಂಡ್ರುನ ರಂಬ್ಸಾಕೆ ಕ್ವಾಣೆಗ್ ಹೋದೆ
    ಕ್ಸಮುಸ್ಬುಡು ಚಿನ್ನ ಕುಡಿಯಲ್ಲ ಇನ್ನ ಅಂದ್ಕಂಡು ಅವಳ್ ಕಾಲ್ಗೆ ನಾ ಬಿದ್ದೆ
    ಅವ್ಳು "ಗಂಡಸ್ರು ಹೆಂಡ್ರು ಕಾಲ್ ಮುಟ್ಬಾರ್ದು ದಮ್ಮಯ್ಯ ಅಂತೀನಿ ನನ್ ಕಾಲ್ನ ಮುಟ್ಬ್ಯಾಡ್ರಿ ನರ್ಕಕ್ಕೆ ಹೋಯ್ತೀನಿ ನಾನು"
    ಕಣ್ನೀರ ಸುರ್ಸ್ಕಂಡು ಕೇಳ್ಕೊಂಡ್ರೂ ಬಿಡ್ಲಿಲ್ಲ
    ಅವಳ್ ಕಾಲ್ನ ಹಿಡ್ದಿದ್ದೆ ಪಟ್ಟಾಗಿ
    ಕಾಲ್ ಹಿಡಿಯೋ ನೆವ್ದಾಗೆ ಕಾಲ್ಚೈನ ಬಿಚ್ಕನ್ಡು
    ಕಳ್ಜೇಬ್ಗೆ ಸೆರ್ಸ್ಕೊಂಡೆ ನಾನು

    |೫| ಏನನ್ನು ಅರಿದೀರೊ ನನ್ ಹೆಂಡ್ರು
    ಅಳ್ತಾನೇ ಅಳ್ತಾನೇ ಮಲ್ಕಂಡ್ಳು
    ನಾ ಕಾಲನ್ನಾ ಮುಟ್ಟಿದ್ನ ನೆನ್ಸ್ಕಂಡು
    ನನ್ ಆಕೇ ಅಪರಂಜಿ ಹೆಣ್ಣು
    ಮೋಸ್ದಿಂದ ಕಾಲ್ಚೈನ ಬಿಚ್ಕಂಡೆ
    ನಾನ್ ಎಂತ ಮುಟ್ಟಾಳ ಗಂಡಾನೋ
    ಅವತ್ಗೇ ಕೊನೆಯಾತು ಹಾಳ್ ಕುಡಿತದ್ ಸವಾಸ
    ಇನ್ಮುಂದೆ ಯಾವತ್ತು ಕುಡಿಲಿಲ್ಲ
    ಮನ್ಸತ್ವ ಇರುವಂತ ಕುಡುಕ್ರೆಲ್ಲಾ ಕೇಳ್ರಪ್ಪೋ
    ಎಲ್ಲರೂನು ನನ್ಹಂಗೆ ಬದ್ಲಾಗ್ರಿ
    ಕುಡ್ತಾನಾ ಬುಟ್ಬುಟ್ಟು ಸಂಸಾರ ಸಾಕಂಡು ನಮ್ಮಂಗೆ ಸುಕ್ವಾಗಿ ಬಾಳ್ರಪ್ಪೋ


  • ಪರಿವಿಡಿ

    ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

    --ಶ್ರೀನಿವಾಸಮೂರ್ತಿ


    |ಪ| ಕೇಳೀರ್ ಕೇಳ್ರಣ್ಣ ಕೇಳ್ರವ್ವೋ
    ಕೇಳೀರ್ ಕೇಳ್ರವ್ವ ಕೇಳ್ರಣ್ಣೋ
    ಇರೋದನ್ ಹೇಳ್ತೀನ್ರೋ
    ತಪ್ ಇದ್ರೆ ತಿದ್ ನಡ್ಸ್ರೋ

    |1| ಅನ್ಯಾಯವ ಮಾಡೋವ್ರತ್ರ ನ್ಯಾಯವ ಕೇಳಂಗಾಯ್ತು
    ಗಾಳಿ ನೀರ್ ಬೆಳ್ಕೀಗು ಕಾಸ್ ಬಂತು

    |2| ನಾಲ್ಕು ವರ‍್ಣಾಶ್ರಮ್ನ ಸಾಯ್ಸಿ ನಾಲ್ಕು ಕೆಲ್ಸುದ್ ಗುಂಪನ್ ಹುಟ್ಸುದ್ರು
    ಅವ್ವವೇ ಕೆಲ್ಸ ತುಸು ಬ್ಯಾರೆ ಮಾಡಿ ಬ್ಯಾರೆ ಹೆಸ್ರುನ್ ಇಟ್ರು

    |3| ವಿದ್ಯೆ ಅಕ್ಸರದಿಂದ್ ಬರುತ್ ಎಂದ್ರು
    ನಮ್ ನೆಲ ಅಕ್ಸರದಿಂದ್ ದುಡ್ಡನ್ ಕೀಳೋ ಬೀಡಾಯ್ತು

    |4| ಅವ್ರು ಇವ್ರುನ್ ಕೊಲ್ತಾರೆ
    ಇವ್ರು ಅವ್ರುನ್ ಕೊಲ್ತಾರೆ
    ಅವ್ರು ಅವ್ರನ್ನೇ ಕೊಲ್ತಾರೆ
    ಇವ್ರು ಇವ್ರನ್ನೇ ಕೊಲ್ತಾರೆ
    ಹುಟ್ಸೋದು ಸಾಯ್ಸೋದು ಇಲ್ಲಿ ಕಸುಬ್ ಆಗಯ್ತೆ

    |5| ಜಾತಿ-ದರ‍್ಮಕೂ ಕತ್ತಿ
    ನುಡಿ-ಗುಡಿಗೂ ಕತ್ತಿ
    ಮರ ಕಡಿಲಾಕೂ ಕತ್ತಿ
    ನಾಡು-ನಾಡಿಯನ್ ಬ್ಯಾರೆ ಮಾಡೋಕು ಕತ್ತಿ

    |6| ಬೆಳ್ಕಿಂದ್ ಕೊಳ್ಕು ಕಾಣ್ಸ್ತಾವೋ
    ಕೊಳ್ಕಿಂದ್ ಕತ್ಲು ಕಾಣ್ಸ್ತಾವೋ
    ಗೊತ್ತು ಗೊತ್ತಿದ್ರು ಕತ್ಲಿಗ್ ಬೀಳ್ತಾವ್ರೋ

    |7| ಕಾಡು ನಾಡಿಗೆ ಪಿರಾಣ ಅಂತಾವ್ರೋ
    ಪಿರಾಣವನ್ನೆ ಬರ‍್ಬಾತ್ ಮಾಡ್ತಾವ್ರೋ
    ಉಸ್ರಿಗೂ ಊಸೇ ಮಾಡೋವ್ರೋ

    |8| ಬಡ್ತನ ಗಿಡ್ತನ ಏನೂ ಇರಂಗಿಲ್ಲ್ ಅಂತಾರೋ
    ಗೆಲ್ಸೀ ಗೆಲ್ಸಿ ಅಂತ್ ಬೇಡ್ತಾರೋ
    ಯುವ್ವೇ! ಗೆದ್ ಮ್ಯಾಗೆ ಗಿಡುಗನಿಗಿಂತ್ ಅತ್ಲತ್ತಾನೋ

    |9| ಸಮಾನತೆ ತರೋಣ್ ಬಂದ್ರೋ ಅವರ‍್ನ್ ನಂಬ್ ಬ್ಯಾಡ್ರೋ
    ಯೇ ಸಮಾನತೆ ಕನ್ಸಿನ್ ಮಾತೋ ಅವರ‍್ನ್ ನಂಬ್ ಬ್ಯಾಡ್ರೋ
    ಅಂತ್ ಕೂಗ್ ಕೂಗಿ ತಲೆ ಕೆಡ್ಸ್ತಾವ್ರೋ

    |10| ತಬ್ಬು ತಬ್ಬಿಗೂ ಚಿನ್ನಾ ರನ್ನಾ ಎಂದ್ ಗುನುಗುತಾರೋ
    ಮೋಜಿನ ಹಣ್ಣು ಬಿಡೋ ಹೊತ್ನಾಗೆ
    ಇವ್ನ್/ ಇವ್ಳ್ದೆ ತಪ್ಪೆಂದು ತಿಪ್ಪೆ ಬಳಿತಾರೋ
    ಜಗಳ್ ಬಯ್ಗುಳ್ ಆಗ್ತಯ್ತ್ರೋ/
    ಒಪ್ಪುದ್ರೆ ನಂಟಿನ್ ಗಂಟ್ ಕುದುರ‍್ತಯ್ತ್ರೋ/
    ಇಲ್ವೆ ದುಡ್ಡಿನ್ ಗಂಟ್ ಬಿಚ್ಬೇಕ್ರೋ
    ಇಲ್ಲಿ ಮೂಲ್ಮೂಲೆಗೂ ಮಾಮೂಲ್ ಆಗಯ್ತ್ರೋ

    |11| ನಿನ್ ಪಾಡ್ ನಿನ್ಗೆ
    ನನ್ ಪಾಡ್ ನನ್ಗೆ
    ಅಂತ್ ಗಂಡ್ಹೆಂಡೀರ್ ಕೂಸ್ನ ಬಿಕಾರಿ ಮಾಡ್ತಾವ್ರೋ

    |12| ಯಾರ‍್ನ್ ನಂಬ್ ಯಾರ್ ತೆಕ್ಕೆಗ್ ಬೀಳ್ತಾವ್ರೋ
    ಒಂದೂ ತಿಳಿದಂಗ್ ಆಗಯ್ತ್ರೋ
    ಇವರದ್ ಮೋಸ್ದ್ ಮೋರೆ ನೋಡ್ರೋ

     
    ಇರೋದನ್ ಹಾಂಗೆ ಹೇಳೀನ್ರೋ
    ತಪ್ ಇದ್ರೆ ತಿದ್ ನಡ್ಸ್ರೋ
    ಅಯ್ಯಾ ಅಕ್ಕಾ
    ತಪ್ ಇದ್ರೆ ತಿದ್ ನಡ್ಸ್ರೋ
    ಕಲಿ ಯುಗ್ದಾಗೆ ಕಲಿಲೇಬೇಕ್ರೋ
    ಇನ್ನೂ ಅದಾವ್ ಕಾಣ್ರೋ
    ಕಂಡಾಗ್ ಹಾಂಗೆ ತಿಳ್ಸ್ತೀನ್ರೋ
    ತಪ್ ಇದ್ರೆ ತಿದ್ ನಡ್ಸ್ರೋ




    ನಮ್ಮ ಈ ಪ್ರಯತ್ನಕ್ಕೆ ದೊರಕಿರುವ ನಿಮ್ಮಯ ಅನಿಸಿಕೆಗಳು
    ನಾವು ಕಯ್ಗೊಳ್ಳುವ ಮುಂದಿನ ಪ್ರಯತ್ನಗಳಿಗೆ ದಾರಿದೀಪವಾಗಿರುತ್ತವೆಂದು
    ತಂಡವು ನಂಬಿರುತ್ತದೆ.

    ವಿಶ್ವಾಸದೊಡನೆ,
    ಭಾವಗುಚ್ಚ ತಂಡ

  • ಪರಿವಿಡಿ
  • No comments:

    Post a Comment