ಸೂಚನೆ: ಈ ಲೇಖನವನ್ನು ವಿಶಾಲ ದೃಷ್ಟಿಕೋನದಿಂದ ಓದಿ ನೋಡಬೇಕೆಂದು ಮನವಿ. ಏಕೆಂದರೆ, ಅಂಗವಿಕಲ ಸಮುದಾಯದ ಒಳಗಿರುವ ನಾನು ಬಹುತೇಕ ಅಂಗವಿಕಲರು ತಮ್ಮ ನ್ಯೂನ್ಯತೆಯನ್ನು ಬಂಡವಾಳವಾಗಿಸಿಕೊಂಡು ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಡೊಡಕಾಗಿರುವವರಲ್ಲಿ ಹೇಗೆ ಒಬ್ಬರಾಗಿದ್ದಾರೆ ಎಂಬುವುದನ್ನು ಬರೆದಿದ್ದೇನೆ. ಅಂಗವಿಕಲರಿಗಿಂತ ವಿಕಲಾಂಗರಲ್ಲದವರು ಅಂಗವಿಕಲರ ನ್ಯೂನ್ಯತೆಯನ್ನು ಬಂಡವಾಳವಾಗಿಸಿಕೊಂಡಿದ್ದಾಗ್ಯೂ ಅವರ ಬಗ್ಗೆ ಈ ಲೇಖನದಲ್ಲಿ ಬರೆದಿಲ್ಲ. ಏಕೆಂದರೆ, ಮೊದಲು ವಿಕಲಾಂಗರು ಅವರ ನ್ಯೂನ್ಯತೆಯನ್ನು ಬಂಡವಾಳವಾಗಿಸಿಕೊಂಡು ಬದುಕುವುದನ್ನು ನಿಲ್ಲಿಸದ ಹೊರತು ವಿಕಲಾಂಗದಲ್ಲದವರು ಅಂಗವಿಕಲರನ್ನು ಬಂಡವಾಳವಾಗಿಸಿಕೊಳ್ಳುವುದನ್ನು ತಪ್ಪಿಸಲಾಗದು.
--
ಏಕತೆಯನ್ನು ವಿವಿಧತೆಯ ನಿಯಮದಡಿ ಸೃಷ್ಟಿ ಜಾಲದಲ್ಲಿ ಬೆಸೆದಿರುವ ಈ ನಿಸರ್ಗ ಪ್ರಾಣಿ, ಪಕ್ಷಿ, ಮತ್ತು ಭೂ ರಚನೆಯಲ್ಲಿ ಅಂಕು-ಡೊಂಕು, ಅಗ್ಗು-ತಗ್ಗು, ಸಮತೆ ಹೀಗೆ ಇನ್ನು ಅನೇಕ ಅಸಮತೋಲಿತವಾಗಿ ತನ್ನ ತನುವಿನಲ್ಲಿ ಅಡಗಿಸಿಕೊಂಡಿದೆ.
ಮಾನವನೂ ಸಹ ಪ್ರಕೃತಿಯ ಭಾಗ; ಆದರೆ, ತಾನು ಪ್ರಕೃತಿಯನ್ನು ಆಳಲು ಹುಟ್ಟಿರುವನೆಂದು ಭಾವಿಸಿಕೊಂಡಿದ್ದಾನೆ. ಪ್ರಕೃತಿಯು ಮಾನವ ಲೋಕವನ್ನು ವೈವಿಧ್ಯವಾಗಿಯೇ ರೂಪಿಸಿದೆ. ಕೆಲವರಿಗೆ ದೈಹಿಕ, ಮಾನಸಿಕ ಆರೋಗ್ಯವನ್ನು ನೀಡಿ, ಇನ್ನ ಕೆಲವರಿಗೆ ಈ ಎರಡನ್ನೂ ಸರಿಯಾಗಿ ನೀಡದೆ ಒಂದು ನಿಯಂತ್ರಣದಲ್ಲಿಟ್ಟಿದೆ. ಮಾನವ ಪ್ರಕೃತಿಯ ನಿಯಮವನ್ನು ‘ನಿನ್ನ ನಿಯಮ, ನೀ ಯಮ ನಂತೆ ಇದೆ.’ ಎಂದು ತಿಳಿದು ಪ್ರಕೃತಿಯ ನಿಯಮವನ್ನು ಧಿಕ್ಕರಿಸಿ ಬದುಕಲು ಆರಂಭಿಸಿದ್ದಾಗಿನಿಂದ ಅನೈತಿಕತೆಯು ಸತ್ಯವನ್ನು, ನೈತಿಕತೆಯನ್ನು ಮತ್ತು ಪ್ರಾಮಾಣಿಕತೆಯನ್ನು ಮೆಟ್ಟಿಬಿಟ್ಟಿದೆ.
ಅಂಗವಿಕಲರ ಬಗ್ಗೆ ಬಹುತೇಕರು ಉತ್ತಮವಾದ, ಅವರು ದೇವರು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇನ್ನು ಕೆಲವು ಜನರು ತಿರಸ್ಕಾರ, ಅಪ್ರಯೋಜಕರು ಎಂದು ಅಂಗವಿಕಲರನ್ನು ನಿಂದಿಸುತ್ತಾ ತಮ್ಮ ಅಮೂಲ್ಯ ಮಾತನ್ನು ಹಾಗೂ ಸಮಯವನ್ನು ಹಾಳುಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಅವರ ಅನಿಸಿಕೆಯನ್ನು ಹೇಗೆಯೇ ವ್ಯಕ್ತಪಡಿಸಿದರೂ ಅದು ಸರಿಯೇ. ಆದರೆ ಬಹುತೇಕ ಅಂಗವಿಕಲರು ತಮ್ಮ ಬುದ್ಧಿ ಸಾಮರ್ಥ್ಯವನ್ನು ಗುರುತಿಸಿಕೊಳ್ಳದೆಯೇ ಅಥವಾ ತಮ್ಮ ಸೀಮಿತ ಧೋರಣೆಗಳಿಂದ ಪ್ರಕೃತಿಯು ನೀಡಿರುವ ನ್ಯೂನ್ಯತೆಯನ್ನೇ ಬಂಡವಾಳವಾಗಿಸಿಕೊಂಡು ಅನೈತಿಕತೆಯ ನೆಲೆಯಲ್ಲಿ ಬದುಕನ್ನು ಸಾಗಿಸುತ್ತಾ ಮಣ್ಣಿಗೆ ಸಾಗುತ್ತಾ ಇದ್ದಾರೆ. ಈ ವಿಷಯ ಅಂಗವಿಕಲರ ಸಮುದಾಯದಲ್ಲಿರುವವರಿಗೆ ಚೆನ್ನಾಗಿ ತಿಳಿದಿದೆ.
ಕೆಟ್ಟದ್ದೂ ಒಳ್ಳೆಯದೂ ಇದ್ದೇ ಇರುತ್ತದೆ. ಅಂತೆಯೇ, ಅಂಗವಿಕಲರಲ್ಲೂ ಸಹ ಒಳ್ಳೆಯವರೂ ಕೆಟ್ಟವರೂ ಇದ್ದಾರೆ. ಆದರೆ ಬಹುತೇಕ ಅಂಗವಿಕಲರು ನ್ಯೂನ್ಯತೆಯನ್ನು ಬಂಡವಾಳವಾಗಿಸಿಕೊಂಡು ಸರ್ಕಾರದ ಮತ್ತು ಖಾಸಾಗಿ ವಲಯಗಳಿಂದ ಬರುವ ಸವಲತ್ತುಗಳನ್ನು ಎರಡೆರಡು ಕಡಗಳಿಂದಲೂ ಪಡೆಯುತ್ತಾ ಇದ್ದಾರೆ. ಇಂಥವರನ್ನು ಏನೆಂದು ಕರೆಯಬೇಕು ತಿಳಿಯದು. ಈಗಾಗಲೆ ದೇಶ ಆರ್ಥಿಕವಾಗಿ ಕುಸಿಯುತ್ತಿದೆ ಎಂಬ ಸಾಮಾನ್ಯ ಅರಿವಿದ್ದರೂ “ನಿಯಮವನ್ನು ರಚಿಸುವ ಅವರೇ ದುಡ್ಡನ್ನು ಕಬಳಿಸುವಾಗ ನಾವು ಅಲ್ಪ ಕಬಳಿಸಿದರೆ ಏನು ತಪ್ಪು” ಎಂದು ತಮಗಿರುವ ನ್ಯೂನ್ಯತೆಯ ಕಾರಣಗಳ ಸರಮಾಲೆಯನ್ನು ಹೇಳುತ್ತಾರೆಯೇ ಹೊರತು, ತಾವು ದೇಶಕ್ಕೆ ಏನ್ನು ಮಾಡಲು ಮನಸ್ಸು ಹಾಗೂ ಪ್ರಯತ್ನ ಮಾಡುತ್ತೀವಿ ಎಂಬುವುದರ ಕಿಂಚಿತ್ತೂ ಸುಳಿವನ್ನೂ ನೀಡುವುದಿಲ್ಲ. ಯಾವುದೇ ಕೆಲಸ ಸಿಗದವರು ಸರ್ಕಾರಗಳ ಹಾಗೂ ಖಾಸಾಗಿಯವರಿಂದ ಸವಲತ್ತನ್ನು ಪಡೆದರೆ ಅದರಲ್ಲಿ ತಪ್ಪಿಲ್ಲ. ಆದರೆ, ಸರ್ಕಾರಿ ಹಾಗೂ ಖಾಸಾಗಿಯಲ್ಲಿ ಕೆಲಸ ಸಿಕ್ಕು ಸಾಕಷ್ಟು ಸಂಬಳ ಪಡೆಯುತ್ತಾ ಇರುವವರೂ ಸಹ ತಮ್ಮ ನ್ಯೂನ್ಯತೆಯನ್ನೇ ಮಾತಿನ ಬಂಡವಾಳದ ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ. ಇಂಥವರು ಅನೈತಿಕತೆಯೇ ಸತ್ವಯುತವೆಂದು ಭಾವಿಸಿರುವ ಹಾಗಿದೆ ಎಂದು ಸತ್ಯವಂತರು ಭಾವಿಸಬಹುದಾಗಿದೆ.
ನಾನೂ ಸಹ ವಿಕಲಾಂಗ. ದೃಷ್ಟಿ ಸವಾಲಿನವ. ಯಾರೋ ಹಿರಿಯರು ‘"ಕಷ್ಟವನ್ನು ಸಹಿಸುವವರಿಗೇ ಮಾತ್ರ ಈ ರೀತಿಯ ನ್ಯೂನ್ಯತೆಯನ್ನು ಆ ಪರಮಾತ್ಮ ನೀಡುತ್ತಾನೆ. ಈ ನ್ಯೂನ್ಯತೆಯನ್ನು ಸವಾಲು ಎಂದು ಸ್ವೀಕರಿಸಿ ಯಶಸ್ವಿಯಾದರೆ ಕಷ್ಟದಲ್ಲಿರುವವರಿಗೆ ದಾರಿ ದೀಪವಾಗುತ್ತದೆ." ಎಂದ ಸತ್ವಯುತ ಮಾತಿಗನುಗುಣವಾಗಿ ಪ್ರತಿಭೆಯನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಈ ಲೇಖನವನ್ನು ನನ್ನ ಅನುಭವದ ಆಧಾರದ ಹಿನ್ನೆಲೆಯಲ್ಲಿ ಬರೆದಿದ್ದೇನೆ. ತಾವು ಎಲ್ಲಾ ಅಂಗವಿಕಲರೂ ಹೀಗೆಯೇ ಎಂದು ಭಾವಿಸಬಾರದೆಂದು ನನ್ನ ಕೋರಿಕೆ. ಒಂದು ವೇಳೆ ಕೊಂಚವಾದರೂ ನೀವು ಎಲ್ಲಾ ಅಂಗವಿಕಲರನ್ನು ಅನೈತಿಕರ ವರ್ಗಕ್ಕೆ ಸೇರಿಸುವ ಆಲೋಚನೆ ಮಾಡಿದ್ದಲ್ಲಿ ನೀವೂ ಸಹ ಅನೈತಿಕರಾಗುವಿರಿ ಎಂದು ನನ್ನ ಅನಿಸಿಕೆ.