‘ಯುವಂಕ’ ದ ಪರಿಕಲ್ಪನೆ

‘ಯುವಂಕ’ ದ ಪರಿಕಲ್ಪನೆ

‘ಯುವಂಕ’ ಇದು ನನ್ನ ಪರಿಕಲ್ಪನೆಯಾಗಿದೆ. ಇದರ ಅರ್ಥ:
ಯಾರು ಭ್ರಷ್ಟಾಚಾರದ ವಿರುದ್ಧ ನ್ಯಾಯಯುತವಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸತ್ವಯುತ ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೋ ಅಂಥವರನ್ನು ‘ಯುವಂಕ’ ಎಂದು ಕರೆಯಬಹುದು.
‘ಯುವಂಕ’ ಇದರ ವಿಸ್ತೃತ ಸಾಲು:
‘ಯು’ “ಯುಕ್ತಿಯಿಂದ”, ‘ವಂ’ “ವಂಚನೆಯ”, ‘ಕ’ “ಕತ್ತಲೆಯನ್ನೋಡಿಸುವವನು” ಎಂದು.

ಸೈನಿಕರು ರಾಷ್ಟ್ರಕ್ಕಾಗಿ ಇರುವಂತೆ, ‘ಯುವಂಕರು’ ಸಮಾಜದ ಕೊಳಕನ್ನು ಇಲ್ಲವಾಗಿಸಲು ಇರಬೇಕೆಂದು ನನ್ನ ಅಭಿಪ್ರಾಯವಾಗಿದೆ.

ಸಮಾಜದಲ್ಲಿ ಎಲ್ಲರಿಗೂ ಸಮಾನಾವಕಾಶ ದೊರೆತು, ಎಲ್ಲರು ಸಮವಾಗಿ ಅರ್ಜಿಸಿ, ಸಮವಾಗಿ ಪ್ರಾಕೃತಿಕ ಸಂಪನ್ಮೂಲವನ್ನು ಹಂಚಿಕೊಂಡು ತಾರತಮ್ಯವಿಲ್ಲದೆ ಬದುಕಲು ಅನುವಾಗಲು ಈ ರೀತಿಯ ಪರಿಕಲ್ಪನೆ ಅವಶ್ಯವಿದೆ.

ಸತ್ಯ ಸಾಯುವುದಿಲ್ಲ ಎಂಬ ಕಟು ಸತ್ಯವನ್ನು ಸಮಾಜದ ದ್ರೋಹಿಗಳ ಮನದಲ್ಲಿನ ಅಹಂಕಾರವನ್ನು ಕಟ್ಟುಮಾಡಿ ತಿಳಿಸಲು  ಅವರ ತಂತ್ರಗಳನ್ನು  ಕೆಡಿಸಲು ‘ಯುವಂಕ’ ದ ಪರಿಕಲ್ಪನೆಯಂಥ  ಪಡೆ ಅವಶ್ಯಕವಾಗಿದೆ.

ಈ ಪರಿಕಲ್ಪನೆಯಲ್ಲಿ ಜಾತಿ, ಧರ್ಮ ಇನ್ನಿತರೆ ತಾರತಮ್ಯವಿರದು. ಅಂತೆಯೆ ಗಂಡು ಹೆಣ್ಣು ಎಂಬ ತಾರತಮ್ಯವೂ ಸಹ ಇರದು. ಮಾನವ ತಾನೂ ಸಹ ಪ್ರಕೃತಿಯ ಒಂದು ಚಿಕ್ಕ ಕಣ, ಜೀವವಿರುವ ಎಲ್ಲಾ ವರ್ಗದ ಜೀವಿಗಳಂತೆಯೇ ಎಂದು ಭಾವಿಸುವ ಹಿನ್ನೆಲೆಯಲ್ಲಿ ಈ ಪರಿಕಲ್ಪನೆ ಇರುತ್ತದೆ. ಸಮಾಜದ ಒಳಿತಷ್ಟೆಯೇ ಇದರ ಮೂಲ ತಳಹದಿಯಾಗಿರುತ್ತದೆ. ದೇಶ ಭಾಷೆಗೆ ತೊಡಕುಂಟಾದರೆ ಮಾತ್ರ ಅಸ್ತಿತ್ವದ ಉಳಿವಿಗಾಗಿ ತಾರತಮ್ಯವನ್ನು ಮಾಡುವುದು ಈ ಪರಿಕಲ್ಪನೆಯಲ್ಲಿರುತ್ತದೆ.

ಶಕ್ತಿಯನ್ನು ಯುಕ್ತಿಯೊಂದಿಗೆ ಹಾಗೂ ಯುಕ್ತಿಯನ್ನು ಶಕ್ತಿಯೊಂದಿಗೆ ಬೆರೆಸಿ ಸಮಯೋಚಿತವಾಗಿ ಸಮಾಜದ ಒಳಿತಿಗೆ ಶ್ರಮಿಸುವ ಪಡೆ ಇಂದು ನಮ್ಮ ದೇಶಕ್ಕೆ ತುರ್ತಾಗಿ ರಚನೆಯಾಗಲೇಬೇಕಾಗಿದೆ. ತಾವೆಲ್ಲರು ಈಗಿಂದೀಗಲೆ ತಮ್ಮಿಂದ ಸಮಾಜಕ್ಕಾಗುವ ಒಳಿತನ್ನು ಮಾಡಲು ಆರಂಭಿಸಬೇಕೆಂದು ನನ್ನ ಮನವಿಯಾಗಿದೆ. ತಾವು ಹೀಗೆ ಮಾಡಿದಲ್ಲಿ ‘ಯುವಂಕ’ ದ ಪರಿಕಲ್ಪನೆಗೆ ಪೂರಕವಾದಂದೆಯೇ ಆಗುತ್ತದೆ.

No comments:

Post a Comment