ನ್ಯಾಯವಾದಿಗಳೆಲ್ಲ ನ್ಯಾಯವಾದಿಗಳೇ?

ಅನ್ಯಾಯ-ಅಸತ್ಯದ ಮಾರ್ಗದಲ್ಲಿ ನಡೆಯುವವರು ಉತ್ತಮರು
ನ್ಯಾಯ-ಸತ್ಯದ ಮಾರ್ಗದಲ್ಲಿ ನಡೆಯುವವರು ಅಧಮರು
ನ್ಯಾಯ-ಅನ್ಯಾಯ ಹಾಗೂ ಸತ್ಯ-ಅಸತ್ಯ ಮಾರ್ಗಗಳೆರಡರಲ್ಲಿ ನಡೆಯುವವರು ಮಧ್ಯಮರು

ಮಧ್ಯಮರು ಬಲು ಜಾಣರೂ, ಅಂಟಿಕೊಳ್ಳದಿದ್ದರೂ ಅಂಟದಂತೆ ಇರುವವರು
ಅಧಮರು ಬಲು ಅಲ್ಪರೂ, ತೂ ಚೇಚೇ ಎಂದೆನಿಸಿಕೊಳ್ಳುವವರು
ಉತ್ತಮರು ಬಲು ಆಪ್ತರೂ, ಅಪ್ಪಿದ ಮೇಲೆ ಇದ್ದುದ್ದನ್ನು ಹೀರಿಕೊಂಡು ಸಿಪ್ಪೆ ಮಾಡಿ ಬೇರೆಯವರ ಮೇಲೆ ತಮ್ಮ ಎಂಜಲನ್ನು ಹಾಕಿ ತಮ್ಮದಲ್ಲ ಈ ಎಂಜಲು ಎಂದು ಸಮಾಜದ ಕನ್ನಡಿಗೆನೆ ಕಣ್ಣೊಡೆದು ತಮ್ಮ ಮೋಹಕ್ಕೆ ಬೀಳಿಸಿಕೊಳ್ಳುವವರು

ಈ ಸಧ್ಯದ ಪರಿಸ್ಥಿತಿಯಲ್ಲಿ ಈ ಮೇಲಿನ ಹೇಳಿಕೆ ನಿಮಗೆ ಸರಿ ಹಾಗೂ ಒಪ್ಪತಕ್ಕದ್ದು ಎಂದು ಅನಿಸಿಯೇ ಇದೆ ಅಲ್ಲವೆ?
ನಿಮಗೆ ತಿಳಿದಿರುವಂತೆ ಬಹುತೇಕ ರಾಜಕಾರಣಿಗಳು ಕಾನೂನು ಶಿಕ್ಷಣವನ್ನು ಪಡೆದವರೇ ಆಗಿರುತ್ತಾರೆ. ಅಂತೆಯೇ ನಮ್ಮ ದೇಶದ ಬಹುತೇಕ ರಾಜಕೀಯ ಪಕ್ಷಗಳಲ್ಲಿ ಕಾನೂನು ವೃತ್ತಿಯಲ್ಲಿರುವ ಮತ್ತು ನ್ಯಾಯವಾದಿಗಳೆಂದು ಹಾ, ನ್ಯಾಯವಾದಿಗಳೆಂದು ತಿರುಗಾಡುವ ಮೊಂಡುವಾದ ಮಾಡುವ ಮಾನವ ಗೋಸಂಬಿಗಳು ಇದ್ದೇ ಇದ್ದಾರೆ. ಕೊಂಚ ನೀವು ಕುಳಿತು ಯೋಚಿಸಿ ನೋಡಿ. ರಾಜಕೀಯ ಪಕ್ಷಗಳೊಳಗಿರುವ ನ್ಯಾಯವಾದಿಗಳು ಕೇವಲ ಪಕ್ಷಕ್ಕೆ ಸಂಬಂಧಪಟ್ಟಂತೆ ತಮ್ಮ ಸ್ವಾ-ಹಿತಾಸಕ್ತಿಗೋಸ್ಕರ ವಾದಮಾಡಲು ಅನ್ಯಾಯವನ್ನು ನ್ಯಾಯವಾಗಿಸುವ ಪರಿವರ್ತಕರಾಗಿ ಕಾರ್ಯವನ್ನೆಸಗುತ್ತಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ ಅನ್ಯಾಯವನ್ನು ತಡೆಯಲಿಕ್ಕಾಗದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ "ನಮ್ಮ ಪಕ್ಷ ಪ್ರಜಾ ಮುಖಿ, ನಾವು ಮಾತ್ರ ದೇಶವನ್ನು ಆಳಲು ಮತ್ತು ಬಡವರನ್ನು ಸಲಹಲು ಶಕ್ತರು" ಎಂದು ಬೀಗಲಿಕ್ಕೆ ಎಷ್ಟು ಬೇಕೋ ಅಷ್ಟು ದೋಚಿಕೊಂಡು ಹಗರಣಗಳನ್ನು ಮಾಡಿಕೊಂಡು ಅಧಿಕೃತವಾಗಿ ದೇಶಕ್ಕೆ ಒಳ್ಳೆಯದನ್ನು ಮಾಡದೆ ತಮಗೋಸ್ಕರ ಬೇಕಾದ್ದನ್ನು ಮಾಡಿಕೊಂಡು ಆ ಮೂತಿಗಿಷ್ಟು ಈ ಮೂತಿಗಿಷ್ಟು ಎಂದು ಒಳಗೊಳಗೆ ಕಿತ್ತಾಡಿಕೊಂಡು ಲಂಚದ ಕಿಡಿಯನ್ನು ತಾವು ಮಾತ್ರ ಹಾಕಿಕೊಳ್ಳದೆ ದೇಶಕ್ಕೂ ಹಾಕುತಾ ಇರುತ್ತಾರೆ.
ನೈಜ ನ್ಯಾಯಕ್ಕಾಗಿ ಹೋರಾಡುವವರು ನ್ಯಾಯಾಲಯಗಳಲ್ಲಿ ಇಂತಹ ಪಕ್ಷಗಳ ಹಗರಣಗಳಿಗೆ ಸಂಬಂಧಪಟ್ಟಂತಹ ದಾವೆಯನ್ನು ಹಾಕಿದಾಗ "ನಾನು ಸರಿ, ಅವರು ಸರಿ ಇಲ್ಲ ಅಥವಾ ನಮ್ಮ ಪಕ್ಷ ಸರಿಯಾಗಿಯೇ ಇದೆ" ಎಂದು ಮೊಂಡುವಾದ ಮಾಡಿಕೊಂಡು ನ್ಯಾಯದ ವ್ಯಾಪ್ತಿಯನ್ನು ಸಂಕುಚಿತಗೊಳಿಸುವ ಹಾಗೂ ನ್ಯಾಯದ ಸಾರವನ್ನು ಹೀರಿಕೊಂಡು ತಮ್ಮ ಸಾರವೇ ನ್ಯಾಯವೆಂದು ವಾದ ಮಾಡುವಂತಹ ತಮ್ಮದೇ ನ್ಯಾಯವಾದಿಗಳನ್ನು ನ್ಯಾಯಾಲಯಕ್ಕೆ ಅಟ್ಟುವ ಮೂಲಕ ತಮ್ಮ ನಡೆಯೇ ನ್ಯಾಯೋಚಿತವೆಂದು ಜನರಿಗೆ ಹೇಳಿ ಹೇಳಿ ಈ ರಾಜಕೀಯ ವ್ಯವಸ್ಥೆಯ ಮೇಲೆ ಜನರಿಗೆ ಜಿಗುಪ್ಸೆ ಬರುವ ಹಾಗೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಲ್ಲಿ ಕೇವಲ ಆಯಾ ರಾಜಕೀಯ ಪಕ್ಷಗಳ ಪರವಾಗಿರುವ ನ್ಯಾಯವಾದಿಗಳಷ್ಟೇ ಇದ್ದಾರೆಂದು ಭಾವಿಸಿದರೆ ತಪ್ಪು ಇವರೊಂದಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಮಗಿಷ್ಟ ಬಂದಂತೆ ತಮ್ಮ ಪಕ್ಷದವರ ಅಸ್ತಿತ್ವಕ್ಕನುಗುಣವಾಗಿ ಕಾರ್ಯಕ್ರಮವನ್ನು ಸಿದ್ಧಪಡಿಸಿ ಪ್ರಸಾರ ಮಾಡುವ ಅಥವಾ ವರದಿಯನ್ನು ಸಿದ್ಧಪಡಿಸಿ ಜನರು ಅದನ್ನು ಒಪ್ಪಿಕೊಳ್ಳುವಂತಹ ಮನೋಭಾವಕ್ಕೆ ತಳ್ಳುತ್ತಿರುವ ಸುದ್ದಿ ವಾಹಿನಿಗಳೂ ಹಾಗೂ ಪತ್ರಿಕೆಗಳು ಇವೆ. ಇದೂ ಅಲ್ಲದೆ, ಎಲ್ಲಾ ರೀತಿಯ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸಿದ ಕೆಲವು ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರೂ ಸಹ ಒಂದು ರಾಜಕೀಯ ಪಕ್ಷದವರ ಚಿಂತನೆಗೆ ಒಳಗಾಗಿರುತ್ತಾರೆ. ಅಂತೆಯೇ ಅವರು ಆ ಪಕ್ಷ ಸಂಕಷ್ಟಕ್ಕೆ ಈಡಾದಾಗ ಅವರು ಮೊಂಡುವಾದವನ್ನು ಮಾಡುವ ಮೂಲಕ ತಾನು ಸಂಪಾದಿಸಿದ್ದ ಗೌರವವನ್ನೂ ಸಹ ಕಳೆದುಕೊಳ್ಳುತ್ತಾರೆ. ಇಂತವರಿಗೆ ಹಣ ಮುಖ್ಯವೇ ಹೊರತು ಅವರು ಗಳಿಸಿದ ಗೌರವ ಮುಖ್ಯವಾಗಿರುವುದಿಲ್ಲ.

ನ್ಯಾಯವು ಅರಣ್ಯದಿಂದ ಹೊಮ್ಮುವ ಆಂಬ್ಲಜನಕವಿದ್ದಂತೆ.
ಅದರಲ್ಲಿ ಘಮಘಮವಾಗಲಿ ಅಥವಾ ಅಸಹ್ಯಕರ ವಾಸನೆಯಾಗಲಿ ಇರುವುದಿಲ್ಲ.
ಆದರೆ,
ಅನ್ಯಾಯವು ಘಮಘಮದಿಂದ ಹಾಗೂ ಅಸಹ್ಯಕರ ವಾಸನೆಯಿಂದ ಕೂಡಿರುತ್ತದೆ. ಮೋಸ ಮಾಡುವಂತಹ ಹಣವಿದ್ದವರಿಗೆ ಇದು ಸುಲಭವಾಗಿ ದೊರಕುತ್ತದೆ. ಇದರಿಂದಾಗಿ ನೊಂದವರು ಕಾನೂನಿಗೆ ವಿಮುಖಿಗಳಾಗಿ ಉಗ್ರವಾದಿಗಳಾಗುತ್ತಿದ್ದಾರೆ.

ನಮ್ಮ ದೇಶದ ಸಂಸದರೂ ಹಾಗೂ ಶಾಸಕರೂ ಒಂದಲ್ಲಾ ಒಂದು ರೀತಿಯಲ್ಲಿ ಅಪರಾಧಕೃತ್ಯವನ್ನು ಮಾಡಿದ್ದರೂ ಜನರಿಂದ ಆಯ್ಕೆಯಾಗಿದ್ದು ಹೇಗೆ?
ಅದು ಹೀಗೆ. ಹೇಗೆಂದರೆ, ನ್ಯಾಯವಾದಿಗಳು ನ್ಯಾಯವಾದಿಗಳಾಗದೆ ಅನ್ಯಾಯವನ್ನು ನ್ಯಾಯವಾಗಿ ಪರಿವರ್ತಿಸಿ ತಮ್ಮ ಪಕ್ಷದವರು ಮಾಡುವ ಅನ್ಯಾಯವನ್ನು ನ್ಯಾಯವೆಂದು ವಾದಿಸಿ ಅವರಿಗೆ ಜಯತಂದು ಕೊಡುವಂತಹ ನ್ಯಾಯದಮ್ಮಳನ್ನು ಕೊಲೆ ಮಾಡುತ್ತಿರುವ ಕೊಲೆಗೆಡುಕರ ಬೆಂಬಲದಿಂದ. ಇಂತವರನ್ನು ಇಲ್ಲವಾಗಿಸಲು ಹೇಗೆ ಸಾಧ್ಯ? ಅದೂ ಅಲ್ಲದೆ ನ್ಯಾಯದ ಅರ್ಥವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರಿಚಿಕೊಂಡಿದ್ದಾರಲ್ಲಾ?
ಇಂತವರು ಯಾವಾಗ ಅಳಿಯುತ್ತಾರೋ ಯಾರು ಬಲ್ಲರು?

ಸರ್ವೋಚ್ಛ ನ್ಯಾಯಾಲಯ ಪದೇ ಪದೇ "ವ್ಯಾಜ್ಯಗಳು ವಿಪರೀತವಾಗಿವೆ ಅವನ್ನು ಇತ್ಯರ್ಥಪಡಿಸುವಲ್ಲಿ ವಿಳಂಬವಾಗುತ್ತಿದೆ" ಎಂದು ಹೇಳುತ್ತಾ ಇದೆ. ಆದರೆ ಅದು ವಿವಿಧ ಪಕ್ಷಗಳ ಪರವಾಗಿರುವ ನ್ಯಾಯವಾದಿಗಳ ನಡತೆಗೆ ಸಂಬಂಧಿಸಿದಂತೆ ಮತ್ತು ವಿವಿಧ ಪಕ್ಷಗಳ ಪರವಾಗಿರುವ ನ್ಯಾಯವಾದಿಗಳು ಹೊಂದಿರುವ ಕಾನೂನು ಅರಿವಿಗೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನೂ ಸಹ ಕೈಗೊಂಡಿಲ್ಲ ಎನಿಸುತ್ತದೆ. ಇದರಿಂದಾಗಿಯೂ ಸಹ ನ್ಯಾಯದ ಪ್ರಕ್ರಿಯೆಗೆ ತೊಡಕಾಗಿದೆ ಎನ್ನಬಹುದು.
ಓದುಗರೆ ನೀವು ನಿಮ್ಮಷ್ಟಕ್ಕೇನೆ ಯೋಚಿಸಿ ನೋಡಿ
ನ್ಯಾಯವಾದಿಗಳೆಲ್ಲಾ ನ್ಯಾಯವಾದಿಗಳೆ?
ಎಂದು.