“ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” mobile-ನಡೆ ಉಲಿ: 9035911023
ಚಾಣಕ್ಯನ ನೀತಿಸೂತ್ರಗಳಲ್ಲಿನ ಕೆಲವು ಹೇಳಿಕೆಗೆ ನನ್ನ ಅಸಮದಾನಗಳು
ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು ಕನ್ನಡಕ್ಕೆ ಅನುವಾದಿಸಿರುವ `ಚಾಣಕ್ಯನ ನೀತಿಸೂತ್ರಗಳು' ಎಂಬ ಹೊತ್ತಗೆಯಲ್ಲಿರುವ ಚಾಣಕ್ಯ ನೀಡಿರುವ ಕೆಲವು ನೀತಿಸೂತ್ರಗಳನ್ನು ನೀವು ನೋಡಿದರೆ ಅವರು ಹೇಳಿದ್ದರ ಕುರಿತು ಅಸಮದಾನಗಳು ತಮಗೂ ಆಗಬಹುದು. ಇಲ್ಲಿ ಕೆಲವು ನೀತಿಸೂತ್ರಗಳಿಗೆ ನಾನು ನನ್ನ ಅಸಮದಾನಗಳನ್ನೊಳಗೊಂಡ ಪ್ರಶ್ನೆಗಳನ್ನು ಬರೆದಿದ್ದೇನೆ.
೧. ನ ಸ್ತ್ರೀರತ್ನಸಮಂ ರತ್ನಂ
ಸ್ತ್ರೀ ರತ್ನಕ್ಕೆ ಸಮವಾದ ಬೇರೆ ರತ್ನವಿಲ್ಲ.
ಅಸಮದಾನ: ಇಲ್ಲಿ ಹೀಗೆ ಸ್ತ್ರೀ ಕುರಿತು ಹೇಳಿರುವ ಚಾಣಕ್ಯರು "ಸ್ತ್ರೀಷು ಕಿಂಚಿದಪಿ ನ ವಿಶ್ವಸೇತ್- ಸ್ತ್ರೀಯರಲ್ಲಿ ಎಳ್ಳಷ್ಟೂ ನಂಬಿಕೆ ಇಡಬಾರದು." ಅಂತ ಯಾಕೆ ಹೇಳಿದರು?
2. ನ ಸಮಾಧಿಃ ಸ್ತ್ರೀಷು ಲೋಕಜ್ಞತಾ ಚ
ಸ್ತ್ರೀಯರಲ್ಲಿ ಮನಸ್ಸಮಾಧಾನ ಮತ್ತು ಪ್ರಪಂಚ ಜ್ಞಾನಗಳು ಇರುವುದಿಲ್ಲ.
ಅಸಮದಾನ: "ಗುರೂಣಾಂ ಮಾತಾ ಗರೀಯಸೀ -ಗುರುಗಳೊಳಗೆ ತಾಯಿಯು ಹೆಚ್ಚಿನವಳು." ಹಾಗಾದರೆ ಗುರು ಎಂಬುವನಲ್ಲಿ ಮನಸ್ಸಮಾಧಾನ ಮತ್ತು ಪ್ರಪಂಚ ಜ್ಞಾನಗಳು ತುಸು ಕಡಿಮೆಯೇ ಇರುತ್ತದೆಂದು ಆಯಿತಲ್ಲವೆ?
3. ಪುತ್ರಾರ್ಥಾ ಹಿ ಸ್ತ್ರೀಯಃ
ಸ್ತ್ರೀಯರಿರುವುದು ಸಂತತಿಗಾಗಿಯೇ.
ಅಸಮದಾನ: ಇಸ್ಲಾಮ್ ಕೂಡ ಮಹಿಳೆಯರನ್ನು ಹುಟ್ಟಿಸುವ ಯಂತ್ರವನ್ನಾಗಿಯೇ ನೋಡಿದ್ದಾಗ್ಯೂ, ಇತ್ತೀಚಿನ ಮುಸಲ್ಮಾನರಲ್ಲಿ ಈ ಕುರಿತು ತುಸು ಬದಲಾವಣೆಯಾಗುತ್ತಿದ್ದರೂ, ಮತ್ ಯಾಕೆ ಕಟ್ಟಾ ಹಿಂದುಗಳು ಹಾಗೂ ಚಾಣಕ್ಯನ ನೆರಳಿನವರು ಈ ವಿಶಯಕ್ಕೆ ಮುಸಲ್ಮಾನರನ್ನು ಹಂಗಿಸುತ್ತಿರೋದು?
4. ಅಪಚಕ್ಷುಷಃ ಕಿಂ ಶರೀರೇಣ
ಕಣ್ಣಿಲ್ಲದವನಿಗೆ ಶರೀರದಿಂದ ಉಪಯೋಗವಿಲ್ಲ.
ಅಸಮದಾನ: ಶರೀರದಿಂದ ಉಪಯೋಗವಿಲ್ಲದಿರಬಹುದಾದರೂ ಗ್ನಾನದಿಂದ ಇದೆಯಲ್ಲವೆ? ಈ ಗ್ನಾನವನ್ನು ಬಳಸಲಿಕ್ಕೆ ಯಂತ್ರ ಬೇಕಾಗಿರುವುದರಿಂದ ಶರೀರದಿಂದ ಉಪಯೋಗವಿದೆ ಅಂತ ನನಗೆ ಅನಿಸಿದೆ. ನಿಮಗೆ?
5. ಯಥಾ ಶರೀರಂ ತಥಾ ಜ್ಞಾನಂ
ದೇಹದಂತೆ ಜ್ಞಾನವಿರುವುದು.
ಅಸಮದಾನ: ದೇಹದಂತೆ ಗ್ನಾನವಿದ್ದರೂ/ಗ್ನಾನದಂತೆ ದೇಹವಿದ್ದರೂ ಒಳ್ಳೆಯ ನಡವಳಿಕೆಗಳು ಪಡೆದ ಗ್ನಾನದ ಬಿಂಬಕ ಅಂತ ಮಾತ್ರ ಹೇಳಬಹುದಲ್ಲವೆ?
೬. ಕಥಂಚಿದಪಿ ಧರ್ಮಾಂ ನಿಷೇವೇತ
ಹೇಗಾದರೂ ಧರ್ಮವನ್ನು ಸೇವಿಸಬೇಕು.
ಅಸಮದಾನ: ದರ್ಮದ ನಶೆಯನ್ನು ಏರಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ ಈ ಹೇಳಿಕೆ ಅಲ್ಲವೆ?
7. ಸರ್ವಾವಸ್ಥಾಸು ಮಾತಾ ಭರ್ತವ್ಯಾ
ಎಲ್ಲ ಅವಸ್ಥೆಗಳಲ್ಲೂ ತಾಯಿಯನ್ನು ಭರಿಸಬೇಕು.
ಅಸಮದಾನ: "ಸ್ತ್ರೀನಾಮ ಸರ್ವಾಶುಭಾನಾಂ ಕ್ಷೇತ್ರಂ-ಎಲ್ಲಾ ಅಶುಭಕ್ಕೂ ಸ್ತ್ರೀ ಎಂಬುವಳು ಉತ್ಪತ್ತಿಸ್ಥಾನ." ತಾಯಿಯ ಕುರಿತು ಹೇಳಿದ ಇವರು ಹಿಂದು ದರ್ಮದಲ್ಲಿ ಮಹಿಳೆಗೆ ಸುಮಂಗಳಕರ ಸ್ತಾನ ಇದ್ದಾಗ್ಯೂ "ಅಶುಭಕ್ಕೂ ಸ್ತ್ರೀ ಎಂಬುವಳು ಉತ್ಪತ್ತಿಸ್ಥಾನ." ಅಂತ ಯಾಕೆ ಹೇಳಿದರು?
8. ನ ದಾನಸಮಂ ವಶಂ
ದಾನಕ್ಕೆ ಸಮವಾದ ವಶೀಕರಣವಿಲ್ಲ.
ಅಸಮದಾನ: ದಾನವನ್ನು ಕೆಟ್ಟ ಹಾಗೂ ಒಳ್ಳೆಯ ಹಿನ್ನೆಲೆಯಲ್ಲಿ ಎರಡು ತೆರನಾಗಿಸಿಕೊಂಡರೆ ಕೆಟ್ಟ ದಾನವನ್ನು ಮತ್ತೊಬ್ಬರನ್ನು ಗುಲಾಮಕ್ಕೆ ಒಳಗುಪಡಿಸಿಕೊಳ್ಳುವ ಶಕ್ತಿ ಹಾಗೂ ಮಾಟಮಂತ್ರದ ಮತ್ತೊಂದು ರೂಪ ಅನ್ನಬಹುದೆ?
--
ಚಾಣಕ್ಯ ರೂಪಿಸಿದ ಮೌರ್ಯ ಸಾಮ್ಬ್ರಾಜ್ಯವು ಚಾಣಕ್ಯನ ನೀತಿಸೂತ್ರಕ್ಕನುಗುಣವಾಗಿಯೇ ಇದೆ ಮತ್ತು ಅಂದಿನ ಸಮಾಜದ ವ್ಯವಸ್ತೆಯನ್ನು ಇದು ತೋರ್ಪಡಿಸಿದೆ. ಚಾಣಕ್ಯ ಒಂದು ಸಾಮ್ಬ್ರಾಜ್ಯವನ್ನು ಕಟ್ಟಿದಾಗ್ಯೂ ಮಹಿಳೆಯರ ಕುರಿತು ಈ ಪರಿ ಕೆಳಮಟ್ಟದ ನಿಲುವನ್ನು ಹೊಂದಿದ್ದಾದರೂ ಯಾವುದರ ಹಿನ್ನೆಲೆ ಎಂಬುವುದನ್ನು ತಿಳಿದುಕೊಳ್ಳಬೇಕಿದೆ. ಅದರಲ್ಲೂ ಒಂದೇ ವಿಶಯಕ್ಕೆ ಸಂಬಂದಿಸಿದಂತೆ ಹಲವು ಬಗೆಯ ಅನಿಸಿಕೆಗಳು ಗಾದೆಗಳಲ್ಲಿ ಇರುವುದು ಸಹಜವಾದರೂ; ಬುದ್ದಿವಂತನೂ, ಯುಕ್ತಿಯನ್ನು ಬಳಸಿ ಹಲವಾರು ವ್ಯಕ್ತಿಗಳಲ್ಲಿನ ಶಕ್ತಿಗಳನ್ನು ಒಗ್ಗೂಡಿಸಿದ ವ್ಯಕ್ತಿ ಒಂದೇ ವಿಶಯವನ್ನು ಈ ಪರಿಯ ಗೊಂದಲದಲ್ಲಿ ಹೊಮ್ಮಿಸಿರುವುದು ಈತ ಬಳಸಿಕೊಂಡ ಯುಕ್ತಿಯಲ್ಲಿ ಅಡಗಿಸಿಕೊಂಡಿದ್ದ ಕೆಡುಕನ್ನು ತೋರ್ಪಡಿಸಿದೆ.
ಅಶೋಕನ ಕಾಲದಿಂದೀಚೆಗೆ ಸಮಾಜವು ಚಾಣಕ್ಯನ ನೀತಿಸೂತ್ರದ ಹತೋಟಿಯಿಂದ ಬಿಡಿಸಿಕೊಂಡು ಸಮಾಜದಲ್ಲಿ ಒಂದಶ್ಟು ಮಹಿಳೆಯರು, ಕೆಳಜಾತಿಯವರು ಹಾಗೂ ಒಟ್ಟಾರೆ ತುಳಿತಕ್ಕೆ ಒಳಗಾದವರು ಈ ನೀತಿಸೂತ್ರಕ್ಕಿಂತಲೂ ಸಾರಯುಕ್ತ ಒಳ್ಳೆಯದಾರಿಯನ್ನು ಹಾಕಬಲ್ಲ ಬರವಣಿಗೆಯನ್ನು ಹಾಗೂ ಬದುಕನ್ನು ಕಟ್ಟಿರುವುದು ಸಂತಸದ ಬೆಳವಣಿಗೆಯಾಗಿದೆ.
ಇವಶ್ಟೇ ಹೇಳಿಕೆಗಳು ನನ್ನನ್ನು ಅಸಮದಾನಕ್ಕೆ ಒಳಗುಪಡಿಸಿಕೊಂಡದ್ದು ಅಂತ ನೀವು ಅಂದುಕೊಳ್ಳದಿರಿ. ನೀವು ಈ ಹೊತ್ತಗೆಯಲ್ಲಿ ಬೇರೆಬೇರೆ ಕಡೆ ಒಂದೇ ವಿಶಯಕ್ಕೆ ಸಂಬಂದಿಸಿದಂತೆ ಬೇರೆಬೇರೆ ಹೇಳಿಕೆಗಳನ್ನು ಗಮನಿಸಿದರೆ ನಿಮ್ಮನ್ನೂ ಈ ನೀತಿಸೂತ್ರಗಳು ಅಸಮದಾನಕ್ಕೆ ಒಳಗುಪಡಿಸುತ್ತವೆ ಅನ್ನೋದು ನನ್ನ ನಿಲುವು. ಈ ನನ್ನ ಅನಿಸಿಕೆಗೆ ಸಂಬಂದಿಸಿದಂತೆ ನೀವು ನಿಮ್ಮ ನಿಲುವುಗಳನ್ನು ಹರಿಬಿಡುವ ಮೂಲಕ ನನ್ನ ಅರಿವಿನ ಎಲ್ಲೆಯನ್ನು ವಿಸ್ತರಿಸುವಿರೆಂಬ ವಿಶ್ವಾಸವಿದೆ.
Subscribe to:
Posts (Atom)